ಸಿಲಿಕಾನ್ ಸಿಟಿಯ ಇಬ್ಬರು ಬಾಲಕರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪವಾಡ ಎನ್ನುವಂತೆ ದೇವರ ಸನ್ನಿಧಿಯಲ್ಲೇ ಮಕ್ಕಳು ಸಿಕ್ಕಿದ್ದಾರೆ. ಇದರಿಂದ ಪೋಷಕರು ಫುಲ್ ಖುಷ್ ಆಗಿ ಉಘೇ ಉಘೇ ಮಾದಪ್ಪ ಎಂದು ಕೈಮುಗಿದಿದ್ದಾರೆ.
ಸಿಲಿಕಾನ್ ಸಿಟಿಯ ಜಯನಗರದ ನಿವಾಸಿಯಾದ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದರು. ಇದರಲ್ಲಿ ಒಬ್ಬ ಮಗ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿದ್ರೆ, ಇನ್ನೊಬ್ಬ ಜಯನಗರದ ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಜನವರಿ 18 ರಂದು ಕಿರಿ ಮಗನಿಗೆ ಹುಷಾರಿಲ್ಲದ ಕಾರಣ ಶಾಲೆಗೆ ಹೋಗಿರಲಿಲ್ಲ, ಹಿರಿಯ ಮಗ ಶಾಲೆಯಿಂದ ಮನೆಗೆ ಬಂದ ಮೇಲೆ ಇಬ್ಬರು ಸೇರಿ ಶಾಲೆಯ ಪ್ರಾಜೆಕ್ಟ್ ವರ್ಕ್ಗೆ ಬೇಕಾದ ವಸ್ತುಗಳನ್ನು ಅಂಗಡಿಯಿಂದ ತಂದು ಮನೆಯಲ್ಲಿಟ್ಟಿದ್ದರು.ಬಳಿಕ ಮನೆಯಿಂದ 10 ನಿಮಿಷಕ್ಕೆ ಬಸ್ಸ್ಟಾಪ್ಗೆ ಹೋಗಿದ್ದರು. ಈ ಬಸ್ಸ್ಟಾಪ್ನಲ್ಲೇ ಕೊನೆಯ ಸಿಸಿಟಿವಿ ದೃಶ್ಯ ಸೆರೆ ಆಗಿತ್ತು. ಆ ಮೇಲೆ ಇಬ್ಬರು ಬಾಲಕರು ಕಾಣಿಸಿರಲಿಲ್ಲ. ಈ ಸಂಬಂಧ ಮಕ್ಕಳ ಪೋಷಕರು ತಿಲಕ್ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದರು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಶೋಧ ಕಾರ್ಯ ನಡೆಸಿದ್ದರು. ಈ ಕಡೆ ಪೋಷಕರು ಮಕ್ಕಳು ಸಿಗಲಿ ಎಂದು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಅಲ್ಲಿ ದೇವರಿಗೆ ಪೂಜೆ ಮಾಡುತ್ತಿದ್ದರು. ಮಕ್ಕಳು ಸಿಗಲಿ ಎಂದು ಉರುಳು ಸೇವೆ ಮಾಡುತ್ತಿದ್ದರು. ದೇವರಿಗೆ ಉರುಳು ಸೇವೆ ಮಾಡುವಾಗಲೇ ಬೆಂಗಳೂರಲ್ಲಿ ನಾಪತ್ತೆ ಆಗಿದ್ದ ಮಕ್ಕಳು ಮಾದಪ್ಪನ ಸನ್ನಿಧಿಯಲ್ಲಿ ಪತ್ತೆ ಆಗಿದ್ದಾರೆ. ಅಳುತ್ತ ಬಂದ ಇಬ್ಬರು ಮಕ್ಕಳು ಪೋಷಕರನ್ನು ತಬ್ಬಿಕೊಂಡಿದ್ದಾರೆ. ಸದ್ಯ ಮಕ್ಕಳನ್ನ ಪೋಷಕರು ಬೆಂಗಳೂರಿಗೆ ಕರೆತರುತ್ತಿದ್ದಾರೆ.