ಬೆಂ.ದಕ್ಷಿಣ ವ್ಯಾಪ್ತಿಯ ಬನ್ನೇರುಘಟ್ಟದಲ್ಲಿರುವ ಐತಿಹಾಸಿಕ ಶ್ರೀ ಚಂಪಕಧಾಮ ಸ್ವಾಮಿ ಅದ್ದೂರಿ ಬ್ರಹ್ಮರಥೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಶ್ರೀದೇವಿ ಭೂದೇವಿ ಸಮೇತ ಶ್ರೀ ಚಂಪಕಧಾಮ ಸ್ವಾಮಿ ದೇವರ ಉತ್ಸವಮೂರ್ತಿಯನ್ನ ಅಲಂಕೃತ ರಥದಲ್ಲಿ ಕೂರಿಸಿ ಊರಿನ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಗೋವಿಂದ ಗೋವಿಂದ ನಾಮಸ್ಮರಣೆಯೊಂದಿಗೆ ದೇವರ ರಥವನ್ನು ಎಳೆದು ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.
ರಥೋತ್ಸವ ಅಂಗವಾಗಿ ದೇವಾಲಯದ ಮೂಲ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಲಾಯಿತು.
ಬಂದಿದ್ದ ಭಕ್ತಾದಿಗಳಿಗೆ ಪಾನಕ ಮಜ್ಜಿಗೆ ಸೇರಿದಂತೆ ಅನ್ನದಾಸೋಹ ಕಾರ್ಯಕ್ರಮವನ್ನು ದೇವಾಲಯದ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಹಮ್ಮಿಕೊಂಡಿದ್ದರು
ಚೋಳರ ಕಾಲದಲ್ಲಿ ನಿರ್ಮಾಣಗೊಂಡ ಪುರಾತನ ಐತಿಹಾಸಿಕ ದೇವಾಲಯದಲ್ಲಿ ಶ್ರೀದೇವಿ ಭೂದೇವಿ ಸಮೇತ ಶ್ರೀ ಚಂಪಕಧಾಮ ಸ್ವಾಮಿ ನೆಲೆ ನಿಂತಿದ್ದಾರೆ ಎಂಬ ಐತಿಹಾಸಿಕ ಹಿನ್ನೆಲೆ ಇದೆ. ಅಲ್ಲದೇ ಬೆಂಗಳೂರು ಸುತ್ತಮುತ್ತ ಚಂಪಕಧಾಮ ಸ್ವಾಮಿ ಹಲವು ಕುಟುಂಬಗಳ ಮನೆ ದೇವರಾಗಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ನಿವಾರಿಸುತ್ತಿದ್ದಾರೆ ಎಂದು ಭಕ್ತರ ನಂಬಿಕೆಯಾಗಿದೆ
ಹೀಗಾಗಿ ಇಂದು ಸಾವಿರಾರು ಭಕ್ತಾದಿಗಳು ಚಂಪಕಧಾಮ ಸ್ವಾಮಿ ದೇವರ ದರ್ಶನ ಪಡೆದು ತಮ್ಮ ಕೋರಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು

